16.05.26         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಸದಾ ನೆನಪಿಟ್ಟುಕೊಳ್ಳಿ, ಬಹಳ ಸಮಯವು ಕಳೆಯಿತು ಇನ್ನು ಸ್ವಲ್ಪವೇ ಉಳಿದಿದೆ, ಈಗ ಮನೆಗೆ ಹೋಗಬೇಕಾಗಿದೆ. ಆದ್ದರಿಂದ ಈ ಛೀ ಛೀ ಪ್ರಪಂಚ ಮತ್ತು ಶರೀರವನ್ನು ಮರೆಯಬೇಕಾಗಿದೆ”

ಪ್ರಶ್ನೆ:
ಯಾವ ನಶೆಯು ನಿರಂತರವಾಗಿದ್ದಾಗ ಸ್ಥಿತಿಯು ಬಹಳ ಫಸ್ಟ್ ಕ್ಲಾಸ್ ಇರುವುದು?

ಉತ್ತರ:
ನಿರಂತರ ನಶೆಯಿರಲಿ - ಬೆಕ್ಕಿಗೆ ಚಲ್ಲಾಟ ಇಲಿಗೆ ಪ್ರಾಣ ಸಂಕಟ. ನಾವು ನಮ್ಮ ಪ್ರಿಯತಮನ ಜೊತೆ ಪ್ರಿಯತಮನ ಮನೆಗೆ ಹೋಗುತ್ತೇವೆ. ಉಳಿದೆಲ್ಲವೂ ಸಮಾಪ್ತಿಯಾಗುವುದು. ನಾವೀಗ ಈ ಹಳೆಯ ಪೊರೆಯನ್ನು ಬಿಟ್ಟು ಹೊಸದನ್ನು ಧಾರಣೆ ಮಾಡುತ್ತೇವೆ. ಇಡೀ ದಿನ ಈ ಜ್ಞಾನವು ಬುದ್ಧಿಯಲ್ಲಿ ಹನಿಯುತ್ತಿರಲಿ. ಆಗ ಅಪಾರ ಖುಷಿಯಿರುವುದು, ಸ್ಥಿತಿಯು ಫಸ್ಟ್ ಕ್ಲಾಸ್ ಆಗಿ ಬಿಡುವುದು.

ಗೀತೆ:
ನನ್ನ ಮನದ ಬಾಗಿಲಲ್ಲಿ ಬಂದವರು ಯಾರು.............

ಓಂ ಶಾಂತಿ.
ಇದನ್ನು ಯಾರು ಹೇಳಿದರು? ಮಕ್ಕಳು. ಅತೀಂದ್ರಿಯ ಸುಖಮಯ ಜೀವನದಲ್ಲಿ ಬಂದು ಹೇಳುತ್ತಾರೆ - ಬೇಹದ್ದಿನ ತಂದೆಯು ಬಂದಿದ್ದಾರೆ. ಏತಕ್ಕಾಗಿ? ಈ ಪತಿತ ಪ್ರಪಂಚವನ್ನು ಪರಿವರ್ತನೆ ಮಾಡಿ ಪಾವನ ಪ್ರಪಂಚವನ್ನಾಗಿ ಮಾಡಲು ಬಂದಿದ್ದಾರೆ. ಪಾವನ ಪ್ರಪಂಚವು ಎಷ್ಟು ದೊಡ್ಡದಾಗಿರುವುದು! ಪತಿತ ಪ್ರಪಂಚವು ಎಷ್ಟೊಂದು ದೊಡ್ಡದಾಗಿದೆ, ಇದು ನೀವು ಮಕ್ಕಳ ಬುದ್ಧಿಯಲ್ಲಿ ಬರಬೇಕಾಗಿದೆ. ಇಲ್ಲಿ ಎಷ್ಟು ಕೋಟ್ಯಾಂತರ ಜನಸಂಖ್ಯೆಯಿದೆ, ಇದಕ್ಕೆ ಪತಿತ, ಭ್ರಷ್ಟಾಚಾರಿ ಪ್ರಪಂಚವೆಂದು ಹೇಳುತ್ತಾರೆ. ಮಧುರಾತಿ ಮಧುರ ಮಕ್ಕಳಿಗೆ ಇದು ಮನಸ್ಸಿನಲ್ಲಿ ಬರಬೇಕು - ನಮ್ಮ ಹೊಸ ಪ್ರಪಂಚವು ಎಷ್ಟು ಚಿಕ್ಕದಾಗಿರುತ್ತದೆ! ನಾವು ಹೇಗೆ ರಾಜ್ಯ ಮಾಡುತ್ತೇವೆ! ನಮ್ಮ ಭಾರತದಂತಹ ದೇಶವು ಮತ್ತ್ಯಾವುದೂ ಇರಲು ಸಾಧ್ಯವಿಲ್ಲ. ಭಾರತವೇ ಸ್ವರ್ಗವಾಗಿತ್ತು, ಅದರಂತಹ ದೇಶವು ಮತ್ತ್ಯಾವುದೂ ಇಲ್ಲವೆಂಬುದನ್ನು ಯಾರೂ ತಿಳಿದುಕೊಂಡಿಲ್ಲ. ಈಗ ನಿಮಗೆ ಅರ್ಥವಾಗುತ್ತಿದೆ, ಈ ಭಾರತವು ಈಗ ಏನೂ ಪ್ರಯೋಜನಕ್ಕೆ ಬರುವುದಿಲ್ಲ. ಭಾರತವೇ ಸ್ವರ್ಗವಾಗಿತ್ತು ಆದರೆ ಈಗ ಇಲ್ಲ. ನಮ್ಮ ಭಾರತವು ಎಲ್ಲದಕ್ಕಿಂತ ಶ್ರೇಷ್ಠವಾಗಿದೆ, ಎಲ್ಲದಕ್ಕಿಂತ ಪ್ರಾಚೀನವಾಗಿದೆ ಎಂಬುದು ಯಾರಿಗೂ ನೆನಪಿಗೆ ಬರುವುದಿಲ್ಲ. ಇದು ನೀವು ಮಕ್ಕಳ ಬುದ್ಧಿಯಲ್ಲಿಯೇ ಬರುತ್ತದೆ ಅದೂ ನಂಬರ್ವಾರ್ ಪುರುಷಾರ್ಥದನುಸಾರ. ಇಷ್ಟೊಂದು ಖುಷಿ, ಇಷ್ಟು ಗೌರವವಿರುತ್ತದೆಯೇ? ಬೇಹದ್ದಿನ ತಂದೆಯು ಬಂದಿದ್ದಾರೆ, ಕಲ್ಪ-ಕಲ್ಪವೂ ಬರುತ್ತಾರೆ. ಮಾಯಾ ರಾವಣನು ನಮ್ಮ ಯಾವ ರಾಜ್ಯಭಾಗ್ಯವನ್ನು ಕಸಿದುಕೊಂಡಿದ್ದಾನೆಯೋ ಅದನ್ನು ಪುನಃ ತಂದೆಯು ಬಂದು ನಾವಾತ್ಮರಿಗೆ ಕೊಡುತ್ತಾರೆ. ಯಾವುದೇ ಯುದ್ಧದಿಂದ ಕಸಿದುಕೊಂಡಿಲ್ಲ. ರಾವಣ ರಾಜ್ಯದಲ್ಲಿ ನಮ್ಮ ಮತವು ಭ್ರಷ್ಟಾಚಾರಿ ಆಗಿ ಬಿಡುತ್ತದೆ. ನಾವು ಶ್ರೇಷ್ಠಾಚಾರಿಗಳಿಂದ ಭ್ರಷ್ಟಾಚಾರಿಗಳಾಗಿ ಬಿಡುತ್ತೇವೆ. ಪ್ರಪಂಚವು ನೋಡಿ ಎಷ್ಟೊಂದು ವೃದ್ಧಿಯಾಗಿ ಬಿಟ್ಟಿದೆ. ನಮ್ಮ ಭಾರತ ದೇಶವು ಎಷ್ಟು ಚಿಕ್ಕದಾಗಿತ್ತು, ಸ್ವರ್ಗದಲ್ಲಿ ಎಷ್ಟೊಂದು ಸುಖಿಯಾಗಿರುತ್ತಾರೆ, ವಜ್ರ-ವೈಡೂರ್ಯಗಳ ಮಹಲುಗಳಿರುತ್ತವೆ, ಅಲ್ಲಿ ರಾವಣನೇ ಇರುವುದಿಲ್ಲ. ನೀವು ಮಕ್ಕಳ ಬುದ್ಧಿಯಲ್ಲಿ ಖುಷಿಯಿರಬೇಕು, ಅತೀಂದ್ರಿಯ ಸುಖವಿರಬೇಕು. ತಂದೆಯು ತಿಳಿಸುತ್ತಾರೆ - ಆತ್ಮಾಭಿಮಾನಿಯಾಗಿರಿ. ದೇಹಭಾನವನ್ನು ಕಳೆಯಲು ಬ್ರಹ್ಮಾ ತಂದೆಯು ಹೇಳುತ್ತಿದ್ದರು - 108 ತೇಪೆಗಳುಳ್ಳ ವಸ್ತ್ರವನ್ನು ಧರಿಸಿರಿ. ಭಲೆ ಹಿರಿಯ ವ್ಯಕ್ತಿಗಳೊಂದಿಗೆ, ವಜ್ರ ವ್ಯಾಪಾರಿಗಳೊಂದಿಗೆ ಸಂಬಂಧವಿತ್ತು, ಅಂದಮೇಲೆ ಆ ನಶೆಯನ್ನು ಹೇಗೆ ಕಳೆಯುವುದು! ಆದ್ದರಿಂದ ದೇಹೀ-ಅಭಿಮಾನಿಯಾಗಬೇಕಾಗಿದೆ. ನಾವಾತ್ಮರಾಗಿದ್ದೇವೆ. ಇದು ಹಳೆಯ ಶರೀರವಾಗಿದೆ, ಇದನ್ನು ಬಿಟ್ಟು ಹೊಸ ಶರೀರವನ್ನು ತೆಗೆದುಕೊಳ್ಳಬೇಕಾಗಿದೆ. ಸರ್ಪವು ಒಂದು ಪೊರೆಯನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತದೆ. ಹಾಗೆಯೇ ನಾವೂ ಸಹ ಈ ಹಳೆಯ ಶರೀರವನ್ನು ಬಿಟ್ಟು ಇನ್ನೊಂದು ಹೊಸ ಶರೀರವನ್ನು ಧಾರಣೆ ಮಾಡುತ್ತೇವೆ ಎಂದು ನೀವು ಮಕ್ಕಳ ಬುದ್ಧಿಯಲ್ಲಿ ಜ್ಞಾನವಿದೆ. ಅಂದಮೇಲೆ ಇಡೀ ದಿನ ನೀವು ಮಕ್ಕಳ ಬುದ್ಧಿಯಲ್ಲಿ ಜ್ಞಾನದ ಚಿಂತನೆ ನಡೆಯುತ್ತಿರಲಿ. ಇದು ಛೀ ಛೀ ಪ್ರಪಂಚವಾಗಿದೆ, ಇದನ್ನು ನೋಡುತ್ತಿದ್ದರೂ ಸಹ ಬುದ್ಧಿಯಿಂದ ಮರೆಯಬೇಕಾಗಿದೆ. ನಾವೀಗ ಯಾತ್ರೆಯಲ್ಲಿದ್ದೇವೆ, ನಮ್ಮ ಬುದ್ಧಿಯೋಗವು ಮನೆಯ ಕಡೆಯಿದೆ - ಈ ಅಭ್ಯಾಸ ಮಾಡಬೇಕಲ್ಲವೆ. ಈ ಶರೀರವೂ ಸಹ ಹಳೆಯದಾಗಿದೆ, ಪ್ರಪಂಚವೂ ಹಳೆಯದಾಗಿದೆ. ಕೆಲವರಿಗೆ ಸಾಕ್ಷಾತ್ಕಾರವೂ ಆಗಿದೆ, ಈಗ ಈ ದೇಹ ಮತ್ತು ದೇಹದ ಎಲ್ಲಾ ಸಂಬಂಧಗಳನ್ನು ಬಿಟ್ಟು ಮನೆಗೆ ಹಿಂತಿರುಗಿ ಹೋಗಬೇಕಾಗಿದೆ. ನಾವೀಗ ಹೋಗಬೇಕೆಂದು ಆಂತರ್ಯದಲ್ಲಿ ಬಹಳ ಖುಷಿಯಾಗುತ್ತದೆ ಅಂದಾಗ ಬುದ್ಧಿಯೋಗವನ್ನು ಅಲ್ಲಿ ಜೋಡಿಸಬೇಕಾಗಿದೆ. ಪರಸ್ಪರ ಇದನ್ನೇ ತಿಳಿಸಿರಿ - ಮನ್ಮನಾಭವ. ಇದು ಬಹಳ ಶಕ್ತಿಶಾಲಿ ಮಂತ್ರವಾಗಿದೆ, ಭಲೆ ಗೀತೆಯನ್ನು ಅನೇಕರು ಓದುತ್ತಾರೆ ಆದರೆ ಅರ್ಥವನ್ನು ತಿಳಿದುಕೊಂಡಿಲ್ಲ. ಹೇಗೆ ಅನ್ಯ ಶಾಸ್ತ್ರಗಳನ್ನು ಓದುತ್ತಾರೆಯೋ ಆ ರೀತಿ ಇದನ್ನೂ ಓದುತ್ತಾರೆ. ಇದು ಯಾರ ಬುದ್ಧಿಯಲ್ಲಿಯೂ ಕುಳಿತುಕೊಳ್ಳುವುದಿಲ್ಲ. ನಾವು ಭವಿಷ್ಯಕ್ಕಾಗಿ ರಾಜಯೋಗವನ್ನು ಕಲಿಯುತ್ತಿದ್ದೇವೆ. ಬಹಳಷ್ಟು ಕಳೆದು ಹೋಯಿತು, ಇನ್ನು ಸ್ವಲ್ಪವೇ ಸಮಯವಿದೆ. ಹೀಗೆ ತಮ್ಮನ್ನು ಖುಷಿಯಲ್ಲಿ ತಂದುಕೊಳ್ಳಬೇಕಾಗಿದೆ. ಇದೆಲ್ಲವೂ ಸಮಾಪ್ತಿಯಾಗಲಿದೆ. ಬೆಕ್ಕಿಗೆ ಚಲ್ಲಾಟ, ಇಲಿಗೆ ಪ್ರಾಣ ಸಂಕಟ ಅರ್ಥಾತ್ ನಾವು ನಮ್ಮ ಪ್ರಿಯತಮನನ್ನು ಅರಿತುಕೊಂಡಿದ್ದೇವೆ. ಎಲ್ಲಾ ಆತ್ಮರ ತಂದೆಯು ಕುಳಿತು ಶಿಕ್ಷಣ ಕೊಡುತ್ತಾರೆ. ಭಲೆ ಸಾಧಾರಣವಾಗಿದ್ದಾರೆ ಆದರೆ ಶ್ರೇಷ್ಠಾತಿ ಶ್ರೇಷ್ಠರಾಗಿದ್ದಾರೆ. ತಂದೆಯು ಬೇಹದ್ದಿನ ಆಸ್ತಿಯನ್ನು ಕೊಡಲು ಬರುತ್ತಾರೆ. ಕಲ್ಪ-ಕಲ್ಪವೂ ಬರುತ್ತಾರೆ. ಇದಂತೂ ಛೀ ಛೀ ಪ್ರಪಂಚವಾಗಿದೆ, ಹೀಗೆ ತನ್ನೊಂದಿಗೆ ಮಾತನಾಡಿಕೊಳ್ಳಬೇಕಾಗಿದೆ. ಇದಕ್ಕೆ ವಿಚಾರ ಸಾಗರ ಮಂಥನವೆಂದು ಹೇಳಲಾಗುತ್ತದೆ. ಈ ಶಾಸ್ತ್ರಗಳನ್ನಂತೂ ಜನ್ಮ-ಜನ್ಮಾಂತರಗಳಿಂದಲೂ ಓದಿದೆವು, ಈಗ ಅರ್ಥವಾಗಿದೆ ಭಾರತವಾಸಿಗಳು ಎಷ್ಟು ಜಪ-ತಪಗಳನ್ನು ಮಾಡಿದ್ದಾರೆಯೋ ಅಷ್ಟು ಮತ್ತ್ಯಾರೂ ಮಾಡಲಿಲ್ಲ. ಯಾರು ಮೊಟ್ಟ ಮೊದಲು ಬಂದಿರುವರೋ ಅವರೇ ಭಕ್ತಿ ಮಾಡಿದ್ದಾರೆ ಮತ್ತು ಅವರೇ ಜ್ಞಾನ, ಯೋಗದಲ್ಲಿ ತೀಕ್ಷ್ಣವಾಗಿ ಮುಂದೆ ಹೋಗುತ್ತಾರೆ ಏಕೆಂದರೆ ಪುನಃ ಅವರೇ ಮೊಟ್ಟ ಮೊದಲಿಗೆ ಬರಬೇಕಾಗಿದೆ ಆದ್ದರಿಂದ ನೀವು ನೋಡುತ್ತೀರಿ – ಕೆಲ ಕೆಲವರು ಬಹಳ ಚೆನ್ನಾಗಿ ಪುರುಷಾರ್ಥ ಮಾಡುತ್ತಾರೆ.

ನೀವು ಮಕ್ಕಳು ಯಾರು ಈ ಆತ್ಮಿಕ ಸೇವೆಯಲ್ಲಿ ತೊಡಗಿದ್ದೀರೋ ಅವರಿಗಾಗಿ ಬಹಳ ಒಳ್ಳೆಯದಾಗಿದೆ. ನಿಜವಾಗಿಯೂ ನೀವು ಭಟ್ಟಿಯಲ್ಲಿ ಕುಳಿತಿದ್ದೀರಿ. ಆ ಸಂಬಂಧವು ಅಟೂಟವಾಗಿದೆ ಮತ್ತು ಯಾರು ಗೃಹಸ್ಥ ವ್ಯವಹಾರದಲ್ಲಿ ಇರುತ್ತಾ ಇದನ್ನು ಕೇಳುತ್ತಾ, ಅನ್ಯರಿಗೂ ಹೇಳುತ್ತಾ ಹೋಗುವರೋ ಅವರು ಹಳಬರಿಗಿಂತಲೂ ಮುಂದೆ ಹೋಗುತ್ತಿದ್ದಾರೆ. ಹೊಸದಾಗಿ ಬರುವವರು ಬಹಳ ತೀಕ್ಷ್ಣವಾಗಿ ಮುಂದೆ ಹೋಗುತ್ತಾರೆ. ನೀವು ಪಟ್ಟಿಯನ್ನು ತೆಗೆದರೆ ಅರ್ಥವಾಗುವುದು. ಮೊಟ್ಟ ಮೊದಲು ತಂದೆಯು ನಿಮ್ಮ ಮಾಲೆಯನ್ನು ಮಾಡುತ್ತಿದ್ದರು, ನಂತರ ನೋಡಿದಾಗ ಎಷ್ಟು ಒಳ್ಳೊಳ್ಳೆಯ ಮಕ್ಕಳು 3-4 ನೇ ನಂಬರಿನವರೂ ಸಹ ಜ್ಞಾನವನ್ನು ಬಿಟ್ಟು ಹೋದರು. ಪ್ರಜೆಗಳಲ್ಲಿ ಹೊರಟು ಹೋದರು. ಈಗ ನಿಮ್ಮದು ಇದು ವಿದ್ಯಾರ್ಥಿ ಜೀವನವಾಗಿದೆ. ಗೃಹಸ್ಥ ವ್ಯವಹಾರದಲ್ಲಿರುತ್ತಾ ಜೊತೆ ಜೊತೆಗೆ ಈ ಕೋರ್ಸನ್ನೂ ಓದುತ್ತೀರಿ. ಅನೇಕ ಮಕ್ಕಳು ಡಬಲ್ ಕೋರ್ಸನ್ನು ತೆಗೆದುಕೊಳ್ಳುತ್ತಾರೆ. ಲಿಫ್ಟ್ ಸಿಗುತ್ತದೆ. ನಿಮ್ಮ ಕೋರ್ಸಾಗಿದೆ - ಗೃಹಸ್ಥ ವ್ಯವಹಾರದಲ್ಲಿರುತ್ತಾ ಇದನ್ನು ಓದುವುದು. ಇದರಲ್ಲಿಯೂ ಕನ್ಯೆಯರು ಬಹಳ ತೀಕ್ಷ್ಣವಾಗಿ ಹೋಗಬೇಕು, ಕನ್ಯೆಯರ ಕಾರಣ ತಂದೆಗೆ ಕನ್ಹಯ್ಯ ಅಥವಾ ಗೋಪಾಲ ಎಂಬ ಹೆಸರಿನ ಗಾಯನವಿದೆ. ವಾಸ್ತವದಲ್ಲಿ ಗೋಪರೂ ಇದ್ದಾರೆ ಏಕೆಂದರೆ ಪ್ರವೃತ್ತಿ ಮಾರ್ಗವಲ್ಲವೆ. ನೀವು ಸತ್ಯಯುಗದಲ್ಲಿ ದೇವಿ-ದೇವತಾ ಧರ್ಮದವರಾಗಿದ್ದಿರಿ, ಈ ಲಕ್ಷ್ಮೀ-ನಾರಾಯಣರು ಪ್ರವೃತ್ತಿ ಮಾರ್ಗದಲ್ಲಿ ರಾಜ್ಯಭಾರ ಮಾಡುತ್ತಿದ್ದರು. ನಾವೀಗ ಹೇಗಿದ್ದವರು ಹೇಗಾಗುತ್ತೇವೆ ಎಂದು ನಿಮ್ಮ ಬುದ್ಧಿಯಲ್ಲಿ ಜ್ಞಾನವು ಹನಿಯುತ್ತಿರಬೇಕು. ದೇವತೆಗಳು ಎಷ್ಟು ಶ್ರೇಷ್ಠರಾಗಿದ್ದಾರೆ, ಅವರ ಮುಂದೆ ಹೋಗಿ ಮಹಿಮೆ ಮಾಡುತ್ತಾರೆ - ತಾವು ಸರ್ವ ಗುಣ ಸಂಪನ್ನರು, 16 ಕಲಾ ಸಂಪೂರ್ಣರು... ನಾವು ಪಾಪಿಗಳು, ಕಪಟಿಗಳಾಗಿದ್ದೇವೆ. ನಾವು ನಿರ್ಗುಣ ಹಾರನಲ್ಲಿ ಯಾವುದೇ ಗುಣವಿಲ್ಲ.... ಇದರಲ್ಲಿ ಭಗವಂತನಿಗೆ ದಯೆ ಬರುವುದಿಲ್ಲ, ಕೃಪೆ ಮಾಡುವುದಿಲ್ಲ. ವಾಸ್ತವದಲ್ಲಿ ದಯೆ ಅಥವಾ ಕೃಪೆಯನ್ನು ತನ್ನ ಮೇಲೆ ತಾನೇ ತೋರಿಸಿಕೊಳ್ಳಬೇಕಾಗಿದೆ ಏಕೆಂದರೆ ನೀವೇ ದೇವತೆಗಳಾಗಿದ್ದಿರಿ, ಈಗ ತಮ್ಮನ್ನು ನೋಡಿಕೊಳ್ಳಿ – ಹೇಗಾಗಿ ಬಿಟ್ಟಿದ್ದೀರಿ. ಈಗ ಮತ್ತೆ ಪುರುಷಾರ್ಥ ಮಾಡಿ ದೇವತೆಗಳಾಗಿರಿ. ಶ್ಯಾಮನಿಂದ ಸುಂದರರಾಗಲು ಪುರುಷಾರ್ಥ ಮಾಡಬೇಕಾಗಿದೆ. ಇದಂತೂ ಭಕ್ತಿ ಮಾರ್ಗದಲ್ಲಿ ಹೇಳುತ್ತಾರೆ - ನಾವು ಸತ್ತು ಹೋಗುತ್ತಿದ್ದೆವು, ಇಂತಹವರ ಕೃಪೆಯಿಂದ, ಇಂತಹವರ ಆಶೀರ್ವಾದದಿಂದ ಪಾರಾದೆವು ಎಂದು. ಮಹಾತ್ಮ ಮೊದಲಾದವರ ಕೈ ಹಿಡಿದುಕೊಂಡು ತಮ್ಮ ಆಶೀರ್ವಾದ ಬೇಕೆಂದು ಹೇಳುತ್ತಾರೆ. ಇಲ್ಲಂತೂ ಇದು ವಿದ್ಯೆಯಾಗಿದೆ, ಕೃಪೆ ಇತ್ಯಾದಿಗಳ ಮಾತಿಲ್ಲ. ಮನ್ಮನಾಭವದ ಅರ್ಥವಿದೆಯಲ್ಲವೆ. ಮಂತ್ರಗಳನ್ನು ಬಹಳಷ್ಟು ತಿಳಿಸುತ್ತಾರೆ, ಅನೇಕ ಪ್ರಕಾರದ ಹಠಯೋಗಗಳನ್ನು ಕಲಿಸುತ್ತಾರೆ. ಪ್ರತಿಯೊಬ್ಬರ ಶಿಕ್ಷಣವು ವಿಭಿನ್ನವಾಗಿರುತ್ತದೆ. ಹಠಯೋಗದ ಮಾದರಿಗಳನ್ನು ನೋಡಬೇಕೆಂದರೆ ಜೈಪುರದ ಮ್ಯೂಜಿಯಂನಲ್ಲಿ ಹೋಗಿ ನೋಡಿರಿ. ಇಲ್ಲಂತೂ ಎಷ್ಟು ಆರಾಮದಿಂದ ಕುಳಿತಿದ್ದೀರಿ. ನಮಗೆ ಪುನಃ ತಂದೆಯು ರಾಜ್ಯಭಾಗ್ಯವನ್ನು ಕೊಡುತ್ತಿದ್ದಾರೆಂದು ನಿಮ್ಮ ಬುದ್ಧಿಯಲ್ಲಿದೆ. ಅಲ್ಲಿಯೇ ಅದ್ವೈತ ದೇವಿ-ದೇವತಾ ಧರ್ಮವಿತ್ತು, ಮತ್ತ್ಯಾವುದೇ ಧರ್ಮವಿರಲಿಲ್ಲ. ಎರಡು ಕೈಗಳು ಸೇರಿದಾಗಲೇ ಚಪ್ಪಾಳೆ ತಟ್ಟಲು ಸಾಧ್ಯ ಅರ್ಥಾತ್ ಒಂದು ಧರ್ಮವಿರುವ ಕಾರಣ ಅಲ್ಲಿ ಯಾವುದೇ ಜಗಳ-ಕಲಹಗಳಿರುವುದಿಲ್ಲ. ಈಗ ಕಲಿಯುಗವಾಗಿದೆ, ಕಲಿಯುಗವು ಪೂರ್ಣವಾದರೆ ಭಕ್ತಿಯೂ ಪೂರ್ಣವಾಗುವುದು. ಈಗಂತೂ ಮನುಷ್ಯರ ಸಂಖ್ಯೆಯು ಎಷ್ಟೊಂದು ವೃದ್ಧಿಯಾಗುತ್ತಿರುತ್ತದೆ. ಭಾರತದ ಧರಣಿಯು ಹೆಚ್ಚುವುದಿಲ್ಲ, ಧರಣಿಯು ಅಷ್ಟೇ ಇರುತ್ತದೆ ಬಾಕಿ ಮನುಷ್ಯರ ಸಂಖ್ಯೆಯು ಹೆಚ್ಚು ಕಡಿಮೆ ಆಗುತ್ತಿರುತ್ತದೆ. ಸತ್ಯಯುಗದಲ್ಲಿ ಇದೇ ಪ್ರಪಂಚವೇ ಇರುವುದು ಆದರೆ ಅಲ್ಲಿ ಜನಸಂಖ್ಯೆಯು ಬಹಳ ಕಡಿಮೆಯಿರುತ್ತದೆ. ಪ್ರಪಂಚವೇನೂ ಚಿಕ್ಕದಾಗಿ ಬಿಡುವುದಿಲ್ಲ ಅಂದಾಗ ನಾವು ನಮ್ಮ ಯೋಗಬಲದಿಂದ ತಂದೆಯ ಶ್ರೀಮತದಂತೆ ರಾಜ್ಯವನ್ನು ಸ್ಥಾಪನೆ ಮಾಡುತ್ತಿದ್ದೇವೆಂದು ನೀವು ಮಕ್ಕಳಿಗೆ ಬಹಳ ಖುಷಿಯಿರಬೇಕು. ತಂದೆಯು ತಿಳಿಸುತ್ತಾರೆ - ಮಕ್ಕಳೇ, ನನ್ನೊಬ್ಬನನ್ನೆ ನೆನಪು ಮಾಡಿ ಆಗ ನಿಮ್ಮ ಪಾಪಗಳು ಭಸ್ಮವಾಗುವುದು. ಆತ್ಮದಲ್ಲಿಯೇ ತುಕ್ಕು ಹಿಡಿದಿದೆಯಲ್ಲವೆ. ಕೇವಲ ಸತೋ, ರಜೋ, ತಮೋ ಎಂದು ಹೇಳುತ್ತಾರೆ ಆದರೆ ಆತ್ಮದಲ್ಲಿಯೇ ಈ ತುಕ್ಕು ಬೀಳುತ್ತದೆ ಎಂದು ತೋರಿಸುವುದಿಲ್ಲ. ಮೊದಲು ಸತೋಪ್ರಧಾನರಾಗಿದ್ದಾಗ ಸತ್ಯ ಚಿನ್ನದ ಸಮಾನರಾಗಿದ್ದಿರಿ ನಂತರ ಆತ್ಮದಲ್ಲಿ ಬೆಳ್ಳಿಯು ಬೆರಕೆಯಾಗುತ್ತದೆ ಅರ್ಥಾತ್ ಅದಕ್ಕೆ ತ್ರೇತಾಯುಗವೆಂದು ಹೇಳಲಾಗುತ್ತದೆ. ಚಂದ್ರವಂಶಿಯರಿರುತ್ತಾರೆ. ಆಂಗ್ಲಭಾಷೆಯ ಶಬ್ಧಗಳು ಎಷ್ಟು ಚೆನ್ನಾಗಿದೆ - ಗೋಲ್ಡನ್, ಸಿಲ್ವರ್, ಕಾಪರ್ ಮತ್ತು ಐರನ್. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಆತ್ಮದಲ್ಲಿ ತುಕ್ಕು ಹಿಡಿದಿದೆ, ಅದು ಬಿಡುವುದಾದರೂ ಹೇಗೆ? ಸತೋದಿಂದ ತಮೋ ಆಗಿ ಬಿಟ್ಟಿದ್ದೀರಿ. ಈಗ ತಮೋದಿಂದ ಸತೋ ಹೇಗಾಗುವುದು? ಇದಕ್ಕಾಗಿ ಗಂಗೆಯಲ್ಲಿ ಸ್ನಾನ ಮಾಡಿದರೆ ಸತೋಪ್ರಧಾನವಾಗಿ ಬಿಡುತ್ತೇವೆ ಎಂದು ತಿಳಿದು ಬಿಡುತ್ತಾರೆ ಆದರೆ ಇದು ಸಾಧ್ಯವಿಲ್ಲ. ಗಂಗಾ ಸ್ನಾನವನ್ನಂತೂ ಪ್ರತಿನಿತ್ಯವೂ ಮಾಡುತ್ತಿರುತ್ತಾರೆ. ಕೆಲವರಂತೂ ನೇಮಿನಾಥರಾಗಿ ಬಿಡುತ್ತಾರೆ. ಕೊಳದಲ್ಲಿಯೂ ಹೋಗಿ ಸ್ನಾನ ಮಾಡುತ್ತಾರೆ. ನಿಮಗೆ ತಂದೆಯು ತಿಳಿಸುತ್ತಾರೆ - ಮಕ್ಕಳೇ, ತಂದೆಯನ್ನು ನೆನಪು ಮಾಡುವ ನಿಯಮವನ್ನಿಟ್ಟುಕೊಳ್ಳಿ. ನೆನಪಿನ ಸ್ನಾನ ಅಥವಾ ಯಾತ್ರೆ ಮಾಡಿ. ತಂದೆಯು ಜ್ಞಾನ ಸ್ನಾನ, ಯೋಗದ ಯಾತ್ರೆಯನ್ನು ಕಲಿಸುತ್ತಾರೆ. ಜ್ಞಾನವನ್ನು ಕೊಡುತ್ತಾರೆ, ಇದರಲ್ಲಿ ಯೋಗದ ಜ್ಞಾನ, ಸೃಷ್ಟಿಚಕ್ರದ ಜ್ಞಾನವೂ ಇದೆ. ಬಾಕಿ ಶಾಸ್ತ್ರಗಳ ಜ್ಞಾನವನ್ನು ಅನೇಕರು ತಿಳಿಸುತ್ತಾರೆ. ಯೋಗವನ್ನು ಯಾರೂ ಅರಿತುಕೊಂಡಿಲ್ಲ. ಇದನ್ನು ಹಠಯೋಗವೆಂದು ತಿಳಿದುಕೊಂಡಿದ್ದಾರೆ. ಯೋಗಾಶ್ರಮಗಳು ಬಹಳಷ್ಟಿವೆ, ಮನ್ಮನಾಭವದ ಮಂತ್ರವು ತಂದೆಯ ವಿನಃ ಮತ್ತ್ಯಾವ ಮನುಷ್ಯರ ಬಳಿಯೂ ಇಲ್ಲ. ಈಗ 84 ಜನ್ಮಗಳ ಚಕ್ರವು ಪೂರ್ಣವಾಗಿದೆ ಮತ್ತೆ ಹೊಸ ಪ್ರಪಂಚವಾಗುವುದು, ವೃಕ್ಷದ ವೃದ್ಧಿಯು ಹೇಗಾಗುತ್ತದೆ ಎಂಬುದು ಈಗ ನಿಮ್ಮ ಬುದ್ಧಿಯಲ್ಲಿದೆ. ಈ ರಾಜಧಾನಿಯು ಸ್ಥಾಪನೆಯಾಗುತ್ತಿದೆ, ಎಲ್ಲರೂ ಒಟ್ಟಿಗೆ ಹೋಗುವುದಿಲ್ಲ. ಬ್ರಾಹ್ಮಣರ ವೃಕ್ಷವು ಬಹಳ ದೊಡ್ಡದಾಗುವುದು ನಂತರ ಕೆಲಕೆಲವರಾಗಿಯೇ ಹೋಗುವರು. ಪ್ರಜೆಗಳೂ ತಯಾರಾಗುತ್ತಿರುವರು. ಯಾರಾದರೂ ಜ್ಞಾನವನ್ನು ಸ್ವಲ್ಪ ಕೇಳಿದರೂ ಸಹ ಪ್ರಜೆಗಳಲ್ಲಿ ಬಂದು ಬಿಡುತ್ತಾರೆ. ಸೇವಾಕೇಂದ್ರಗಳು ಬಹಳ ವೃದ್ಧಿ ಹೊಂದುತ್ತವೆ. ಎಲ್ಲಿ ನೋಡಿದರಲ್ಲಿ ಪ್ರದರ್ಶನಿಗಳನ್ನು ಇಡುತ್ತಾ ಹೋಗುವರು. ಹೇಗೆ ಮಂದಿರಗಳನ್ನು ಕಟ್ಟಿಸುತ್ತಾ ಹೋಗುವರೋ ಹಾಗೆಯೇ ನಿಮ್ಮ ಪ್ರದರ್ಶನಿಗಳೂ ಸಹ ಹಳ್ಳಿ-ಹಳ್ಳಿಗಳಲ್ಲಿ ಸ್ಥಾಪನೆಯಾಗುತ್ತದೆ. ಮನೆ-ಮನೆಯಲ್ಲಿ ಪ್ರದರ್ಶನಿಯನ್ನು ಇಡುವರು, ವೃದ್ಧಿಯಾಗುತ್ತಾ ಹೋಗುತ್ತದೆ. ಆದ್ದರಿಂದ ಕೊನೆಗೆ ಈ ಚಿತ್ರಗಳನ್ನು ಮುದ್ರಿಸಬೇಕಾಗುವುದು. ಎಲ್ಲರ ಬಳಿ ತಂದೆಯ ಸಂದೇಶ ತಲುಪುವುದು. ನೀವು ಮಕ್ಕಳು ಬಹಳಷ್ಟು ಸರ್ವೀಸ್ ಮಾಡಬೇಕಾಗಿದೆ, ಈಗಂತೂ ಈ ಪ್ರೊಜೆಕ್ಟರ್, ಪ್ರದರ್ಶನಿಯ ಫ್ಯಾಷನ್ ಬಂದಿದೆ ಆದ್ದರಿಂದ ಹಳ್ಳಿ-ಹಳ್ಳಿಗಳಲ್ಲಿ ಇದನ್ನು ತೋರಿಸಿರಿ, ಇದರಿಂದ ಬಹಳ ಚೆನ್ನಾಗಿ ತಿಳಿದುಕೊಳ್ಳುವರು. ಶಿವ ಜಯಂತಿಯ ಗಾಯನವಿದೆ ಆದರೆ ಶಿವನು ಹೇಗೆ ಬರುವರು? ಎಂಬುದು ಯಾರಿಗೂ ತಿಳಿದಿಲ್ಲ. ಶಿವ ಪುರಾಣದಲ್ಲಿ ಈ ಮಾತುಗಳಿಲ್ಲ. ಈ ಮಾತುಗಳನ್ನು ಕೇವಲ ನೀವು ಮಕ್ಕಳೇ ಕೇಳುತ್ತೀರಿ, ಕೇಳುವ ಸಮಯದಲ್ಲಿ ಬಹಳ ಇಷ್ಟವಾಗುತ್ತದೆ ಮತ್ತೆ ಮರೆತು ಹೋಗುತ್ತೀರಿ. ನಿಮ್ಮಲ್ಲಿ ಜ್ಞಾನ ಬಿಂದುಗಳು ಚೆನ್ನಾಗಿ ಧಾರಣೆಯಾಗಿದ್ದಾಗ ಬಹಳ ಚೆನ್ನಾಗಿ ಸರ್ವೀಸನ್ನೂ ಮಾಡುವಿರಿ ಆದರೆ ಎಲ್ಲಾ ಜ್ಞಾನದ ಅಂಶಗಳು ಯಾರಿಗೂ ಧಾರಣೆಯಾಗುವುದಿಲ್ಲ. ಭಾಷಣ ಮಾಡಿ ಬಂದ ನಂತರ ಈ ಅಂಶವನ್ನು ತಿಳಿಸಿದ್ದರೆ ಬಹಳ ಚೆನ್ನಾಗಿರುತ್ತಿತ್ತು ಎಂದು ವಿಚಾರ ಬರುತ್ತದೆ. ಭಾಷಣ ಮಾಡಿದ ನಂತರ ನಾವು ಇವೆಲ್ಲಾ ಅಂಶಗಳನ್ನು ಸರಿಯಾಗಿ ತಿಳಿಸಿದೆವೆ? ಎಂದು ವಿಚಾರ ಮಾಡುತ್ತಾರೆ. ಈಗಿನ್ನೂ ಬಹಳಷ್ಟು ಜ್ಞಾನದ ವಿಚಾರಗಳನ್ನು ಮರೆತು ಹೋಗುತ್ತಾರೆ. ಇವೆಲ್ಲವೂ ಜೊತೆ ಬರುವುದಿಲ್ಲ. ಇದು ಕೇವಲ ಈಗಿನ ಸಮಯಕ್ಕಾಗಿ ಮಾತ್ರ, ನಂತರ ಇದೆಲ್ಲವೂ ಸಮಾಪ್ತಿ ಆಗಿ ಬಿಡುವುದು. ಈಗ ಈ ಕಣ್ಣುಗಳಿಂದ ಏನೆಲ್ಲವೂ ನೋಡುತ್ತೀರೋ ಇದು ಸತ್ಯಯುಗದಲ್ಲಿರುವುದಿಲ್ಲ. ಈಗ ನಿಮಗೆ ಜ್ಞಾನದ ಮೂರನೇ ನೇತ್ರವು ಸಿಗುತ್ತದೆ, ನೀವೀಗ ತ್ರಿನೇತ್ರಿಗಳಾಗುತ್ತೀರಿ. ತಂದೆಯು ಬಂದು ನಿಮಗೆ ಜ್ಞಾನವನ್ನು ಕೊಡುತ್ತಿದ್ದಾರೆ, ಅದನ್ನು ಆತ್ಮವು ಧಾರಣೆ ಮಾಡಿಕೊಳ್ಳುತ್ತದೆ. ಆತ್ಮಕ್ಕೆ ಮೂರನೇ ನೇತ್ರವು ಸಿಗುತ್ತದೆ. ನಾನಾತ್ಮನಾಗಿದ್ದೇನೆ, ನಾನು ಈ ಶರೀರದ ಮೂಲಕ ಇಂತಹ ಕರ್ಮವನ್ನು ಮಾಡುತ್ತೇನೆ, ತಂದೆಯು ನಮಗೆ ಓದಿಸುತ್ತಾರೆ ಎಂಬ ಜ್ಞಾನವು ಈಗ ಯಾರಲ್ಲಿಯೂ ಇಲ್ಲ, ಇದನ್ನು ಬುದ್ಧಿಯಲ್ಲಿ ಇಟ್ಟುಕೊಳ್ಳುವುದು ಬಹಳ ಪರಿಶ್ರಮವಾಗಿದೆ. ಮಕ್ಕಳು ಪರಿಶ್ರಮ ಪಡಬೇಕು ಮತ್ತು ಖುಷಿಯಲ್ಲಿ ಇರಬೇಕಾಗಿದೆ. ಈಗ ನಮ್ಮ ರಾಜ್ಯವು ಬಂದಿತೆಂದರೆ ಬಂದಿತು. ನಮ್ಮ ರಾಜ್ಯದಲ್ಲಿ ಏನೇನಿರುವುದು ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ನೀವು ಮಕ್ಕಳಿಗಂತೂ ನಾವೀಗ ಈ ವಿದ್ಯೆಯಿಂದ ರಾಜ್ಯಭಾಗ್ಯವನ್ನು ಪಡೆಯುತ್ತೇವೆಂದು ಬಹಳ ಖುಷಿಯಿರಬೇಕಾಗಿದೆ. ಓದುವವರಿಗೆ ಪದವಿಯ ನೆನಪಿರುತ್ತದೆ. ನಾವು ಭವಿಷ್ಯಕ್ಕಾಗಿ ಓದುತ್ತೇವೆ, ಚೆನ್ನಾಗಿ ಓದಿದ್ದೇ ಆದರೆ ರಾಜ್ಯ ಸಿಂಹಾಸನದ ಮೇಲೆ ಕುಳಿತುಕೊಳ್ಳುವೆವು. ಅಂತಹವರು ಪ್ರಸಿದ್ಧರಾಗುತ್ತಾರೆ. ಈಗ ಅದರ ಪಟ್ಟಿಯನ್ನು ತೆಗೆದು ಮಾಲೆಯನ್ನು ತಯಾರಿಸಿದರೆ ಆಗ ಎಲ್ಲರೂ ಹೇಳುವರು - ಇಂತಹವರು ನಮ್ಮ ಬಳಿ ರಿಫ್ರೆಷ್ ಮಾಡಲು ಕಳುಹಿಸಿ ಎಂದು. ಭಾಷಣ ಮಾಡುವವರನ್ನು ಕರೆಸುತ್ತಾರೆ ಅಂದಮೇಲೆ ಅವರಿಗೆ ಗೌರವ ಕೊಡಬೇಕು, ನಾವೂ ಸಹ ಇವರಂತೆ ಬುದ್ಧಿವಂತರಾಗಬೇಕೆಂದು ಸಂಕಲ್ಪವಿರಲಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಅತೀಂದ್ರಿಯ ಸುಖದ ಅನುಭವ ಮಾಡಲು ದೇಹಭಾನವನ್ನು ಕಳೆಯುವ ಪುರುಷಾರ್ಥ ಮಾಡಬೇಕಾಗಿದೆ. ಈಗ ಹಿಂತಿರುಗಿ ಮನೆಗೆ ಹೋಗಬೇಕಾಗಿದೆ, ಆದ್ದರಿಂದ ಬುದ್ಧಿಯೋಗವು ಮನೆಯೊಂದಿಗೆ ತೊಡಗಿರಲಿ.

2. ಗೃಹಸ್ಥ ವ್ಯವಹಾರದಲ್ಲಿರುತ್ತಾ ವಿದ್ಯೆಯನ್ನೂ ಓದಬೇಕಾಗಿದೆ, ಡಬಲ್ ಕೋರ್ಸ್ ತೆಗೆದುಕೊಳ್ಳಬೇಕು. ಜ್ಞಾನದ ಸ್ನಾನ ಮತ್ತು ನೆನಪಿನ ಯಾತ್ರೆಯನ್ನು ಮಾಡಬೇಕು ಮತ್ತು ಅನ್ಯರಿಗೂ ಮಾಡಿಸಬೇಕಾಗಿದೆ.

ವರದಾನ:
ಕೋಮಲತೆಯನ್ನು ಚಮತ್ಕಾರದಲ್ಲಿ ಪರಿವರ್ತನೆ ಮಾಡುತ್ತಾ ಮಾಯಾಜೀತರಾಗುವಂತಹ ಶಕ್ತಿ ಸ್ವರೂಪ ಭವ.

ಶಕ್ತಿ ಸ್ವರೂಪರಾಗುವುದಕ್ಕಾಗಿ ಕೋಮಲತೆಯನ್ನು ಚಮತ್ಕಾರದಲ್ಲಿ ಪರಿವರ್ತನೆ ಮಾಡಿರಿ. ಕೇವಲ ಸ್ವಯಂನ ಸಂಸ್ಕಾರಗಳನ್ನು ಪರಿವರ್ತನೆ ಮಾಡುವುದರಲ್ಲಿ ಕೋಮಲರಾಗಿರಿ, ಕರ್ಮದಲ್ಲೆಂದಿಗೂ ಕೋಮಲರಾಗಬಾರದು, ಇದರಲ್ಲಿ ಶಕ್ತಿ ರೂಪವುಳ್ಳವರಾಗಿರಿ.ಯಾರು ಶಕ್ತಿ ರೂಪದ ಕವಚವನ್ನು ಧರಿಸುತ್ತಾರೆಯೋ, ಅವರಿಗೆ ಮಾಯೆಯ ಯಾವುದೇ ಬಾಣವು ನಾಟಲು ಸಾಧ್ಯವಿಲ್ಲ ಆದ್ದರಿಂದ ತಮ್ಮ ಚಹರೆ, ನಯನ, ಚಲನೆಯಿಂದ ಕೋಮಲತೆಗೆ ಬದಲಾಗಿ ಶಕ್ತಿ ರೂಪವು ಕಾಣಿಸಲಿ, ಇದರಿಂದ ಮಾಯಾಜೀತರಾಗಿ ಪಾಸ್-ವಿತ್-ಆನರ್ನ ಸರ್ಟಿಫಿಕೇಟನ್ನು ತೆಗೆದುಕೊಳ್ಳಲು ಸಾಧ್ಯವಾಗುವುದು.

ಸ್ಲೋಗನ್:
ಪ್ರತಿಯೊಂದು ಕರ್ಮವನ್ನು ತ್ರಿಕಾಲ ದರ್ಶಿಯ ಸ್ಥಾನದಲ್ಲಿ ಸ್ಥಿತರಾಗಿದ್ದು ಮಾಡುತ್ತೀರೆಂದರೆ, ಮಾಯೆಯು ದೂರದಿಂದಲೇ ಓಡಿ ಹೋಗುತ್ತದೆ.

ಅವ್ಯಕ್ತ ಸೂಚನೆ:– “ಸದಾ ಅಚಲ, ಅಡೋಲ, ಏಕರಸ ಸ್ಥಿತಿಯ ಅನುಭವ ಮಾಡಿ”

ಹೇಗೆ ಸಾಕಾರ ತಂದೆ ಅವಿಶ್ರಾಂತ ಹಾಗೂ ಏಕರಸ ಸ್ಥಿತಿಯ ಉದಾಹರಣೆಯಾಗಿ ತೋರಿಸಿದರು, ಅದೇ ರೀತಿ ತಾವು ಮಕ್ಕಳಿಗೂ ಅನ್ಯರ ಪ್ರತಿ ಉದಾಹರಣೆಯಾಗಿ ತೋರಿಸಬೇಕು, ಇದೇ ಸೇವೆ ಆಗಿದೆ. ಸೇವೆ ಕೇವಲ ವಾಣಿಯಿಂದ ಆಗುವುದಿಲ್ಲ, ಸ್ಥಿತಿಯಿಂದಲು ಸಹ ಸೇವೆಯಾಗುತ್ತದೆ. ಸಮಯ ಪ್ರಮಾಣ ಈಗ ತಮ್ಮ ಸ್ಥಿತಿಯನ್ನು ಏಕರಸ ಮಾಡಿಕೊಳ್ಳಿ.